ಸುಂದರ ಕರ್ಕೇರ
ಪೈಲ್ವಾನ್ ಸುಂದರ ಕರ್ಕೇರ ಅವರು ಬೆಂಗಳೂರು ಕಡೆಯಲ್ಲಿ ಮಂಗಳೂರು ಪೈಲ್ವಾನ್ ಎಂದೇ ಪರಿಚಿತರು. ಅವರದ್ದು ತುಳು ಚಿತ್ರರಂಗದ ಆರಂಭದ ದಿನಗಳಲ್ಲಿ ವರ್ಣಮಯ ವ್ಯಕ್ತಿತ್ವ. ತುಳು ಸಿನಿಮಾಕ್ಕಾಗಿ ಲೀಲಾವತಿ ಅವರೊಂದಿಗೆ ಬಣ್ಣ ಹಚ್ಚಿ ಮೊದಲು ಕ್ಯಾಮರಾ ಎದುರಿಸಿದವರೇ ಅವರು. ಅದು ‘ದಾರೆದ ಬುಡೆದಿ’ ಸಿನಿಮಾಕ್ಕಾಗಿತ್ತು. ಆದರೆ, ಕಾರಣಾಂತರಗಳಿಂದ ಅವರು ಆ ಚಿತ್ರದಲ್ಲಿ ನಟನೆ ಮುಂದುವರಿಸಲಿಲ್ಲ. ಬದಲಾಗಿ ತರಾತುರಿಯಲ್ಲಿ ಸಿದ್ಧವಾಗಿ ಮೊದಲು ಬಿಡುಗಡೆಗೊಂಡ ‘ಎನ್ನ ತಂಗಡಿ’ಯ ಎಸ್.ಆರ್. ರಾಜನ್ ಅವರ ತಂಡ ಸೇರಿಕೊಂಡು ಆರ್ಥಿಕ ಸಹಾಯವನ್ನೂ ಮಾಡಿದರು.
ಅವರಿಗೆ ಚಿತ್ರರಂಗ ಹೊಸದೇನೂ ಆಗಿರಲಿಲ್ಲ. ವ್ಯವಹಾರ ನಿಮಿತ್ತ ಬೆಂಗಳೂರಿಗೆ ಹೋಗುತ್ತಿದ್ದ ಅವರಿಗೆ ಕನ್ನಡ ಚಿತ್ರರಂಗದವರ ಪರಿಚಯವಾಗಿತ್ತು. ಪರಿಣಾಮವಾಗಿ ‘ಸೇಡಿಗೆ ಸೇಡು’, ‘ಕಣ್ಣೀರು’, ‘ಮೃತ್ಯುಪಂಜರದಲ್ಲಿ ಗೂಢಚಾರಿ 555’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದ ಸಂದರ್ಭದಲ್ಲಿ ಅವರಿಗೆ ಸಹನಿರ್ದೇಶಕರಾಗಿದ್ದ ಎಸ್.ಆರ್. ರಾಜನ್ ಅವರ ಪರಿಚಯವಾಗಿತ್ತು.
ಪರಿಣಾಮವಾಗಿ ಅವರು ‘ವಿಜಯಾ ಸಿನಿಟೋನ್’ ಬ್ಯಾನರ್ನಲ್ಲಿ ಎಸ್. ಆರ್. ರಾಜನ್ ನಿರ್ದೇಶನದಲ್ಲಿ ‘ಐದು ಬೆರಳು’ ಎಂಬ ಕನ್ನಡ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಇದು ಮಂಗಳೂರಿನಲ್ಲಿಯೇ ಚಿತ್ರೀಕರಣವಾಗಿತ್ತು. ಅದರಲ್ಲಿ ನಾಯಕ ನಟರಾಗಿದ್ದವರೆಂದರೆ, ನಂತರ ತುಳುವಿನ ಮೊದಲ ನಾಯಕ ನಟರಾದ ಆನಂದ ಶೇಖರ್ ಅವರು. ಕರ್ಕೇರಾ ಅವರ ಪರಿಚಯವೇ ಎಸ್.ಆರ್. ರಾಜನ್ ಅವರು ತರಾತುರಿಯಲ್ಲಿ ಮೊದಲ ತುಳು ಚಿತ್ರ ನಿರ್ಮಿಸಲು ಕಾರಣ ಎನ್ನಬಹುದು.
Leave a Reply
Be the First to Comment!