ಆನಂದ ಶೇಖರ್
ತುಳು ಚಿತ್ರರಂಗದ ಮೊತ್ತಮೊದಲ ನಾಯಕ ನಟ ಆನಂದ ಶೇಖರ್. ಮೊದಲ ತುಳು ಚಿತ್ರ ‘ಎನ್ನ ತಂಗಡಿ’ ಚಿತ್ರದಲ್ಲಿ ನಟಿಸಿದ್ದಲ್ಲದೆ ನಿರ್ಮಾಣದಲ್ಲಿಯೂ ಸಹಾಯ ಮಾಡಿದ್ದರು. ಅವರು ಮೂರನೇ ತುಳು ಚಿತ್ರ ‘ಪಗೆತ ಪುಗೆ’ಯ ಸಹ ನಿರ್ಮಾಪಕರಾಗಿ ದ್ವಿಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಆ ಕಾಲಕ್ಕೆ ಅತ್ಯಂತ ಯಶಸ್ವಿಯಾಗಿತ್ತು. ನಂತರ ಕೆಲವು ಚಿತ್ರಗಳಲ್ಲಿ ನಟ, ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ರಂಗಭೂಮಿ ಮತ್ತು ಚಿತ್ರರಂಗ ಆನಂದ ಶೇಖರ್ ಅವರಿಗೆ ಹೊಸದಾಗಿರಲಿಲ್ಲ. ಕಟ್ಟುಮಸ್ತಾದ ದೇಹ ಮತ್ತು ಸುಂದರ ವ್ಯಕ್ತಿತ್ವ ಹೊಂದಿದ್ದ ಅವರು, ಚಿಕ್ಕ ಪ್ರಾಯದ ಯುವಕನಾಗಿದ್ದಾಗಲೇ ನವೋದಯ ಕಲಾಸಂಘ, ಕರ್ನಾಟಕ ಸಂಗೀತ ನಾಟಕ ಸಭಾ ಮುಂತಾದ ಸಂಘಸಂಸ್ಥೆಗಳ ನಾಟಕಗಳಲ್ಲಿ ನಾಯಕನಾಗಿ ಅಭಿನಯಿಸಿ ಹೆಸರು ಮಾಡಿದ್ದರು.
ನಂತರ ನಟ ಎಂ.ಪಿ. ಶಂಕರ್ ನೆರವಿನಿಂದ ಕನ್ನಡ ಚಿತ್ರ ರಂಗ ಪ್ರವೇಶಿಸಿದರು. ಅವರು ‘ಕಳ್ಳರ ಕಳ್ಳ’ ‘ಗಂಧದ ಗುಡಿ’ಯಲ್ಲಿ ನಟಿಸಿ ಹೆಸರು ಮಾಡಿದರು. ನಂತರ ತುಳುವರಾದ ಪೈಲ್ವಾನ್ ಸುಂದರ ಕರ್ಕೇರ ಅವರು ನಿರ್ಮಿಸಿದ ‘ಐದು ಬೆರಳು’ ಕನ್ನಡ ಚಿತ್ರದಲ್ಲಿ ನಾಯಕನಾಗಿ ನಟಿಸಿ ಯಶಸ್ವಿಯಾದರು.
ಅವರು ತನ್ನ ‘ಮೈತ್ರಿ ಫಿಲಂಸ್’ ಮೂಲಕ ತುಳು ಚಿತ್ರ ನಿರ್ಮಾಣಕ್ಕೆ ಮುಂದಾದರು. ‘ಪಗೆತ ಪುಗೆ’ ಬಳಿಕ ಅವರು ನಿರ್ಮಿಸಿದ ಚಿತ್ರವೆಂದರೆ, ಚಿತ್ರ ನಟಿ ಜಯಮಾಲಾ ನಟಿಸಿದ ‘ಕಾಸ್ದಾಯೆ ಕಂಡನೆ’. ಅದರಲ್ಲಿಯೂ ಅವರು ನಾಯಕರಾಗಿದ್ದರು. ಹಲವಾರು ಹೊಸ ಕಲಾವಿದರಿಗೆ ಅವಕಾಶ ನೀಡಿದ ಹೆಗ್ಗಳಿಕೆ ಅವರದ್ದು.
Leave a Reply
Be the First to Comment!