ಈ ತನಕ ಬಿಡುಗಡೆಯಾದ ತುಳು ಚಿತ್ರಗಳಲ್ಲಿ ಕೆಲವು ಸೂಪರ್ ಹಿಟ್ ಆಗಿ ಕೆಲವು ತೋಪಾದರೂ, ಸದಾ ಕಾಲ ಜನರ ಮನಸ್ಸಿನಲ್ಲಿ ಉಳಿದಿರುವಂತದ್ದೆಂದರೆ ಹಳೆಯ ತುಳು ಚಿತ್ರ ಸಂಗೀತ. ‘ಹಿಂದಿ ಓಲ್ಡ್ ಸಾಂಗ್ಸ್’ನಂತೆ ಇಂದಿಗೂ ಆ ಕಾಲದ ಹಾಡುಗಳನ್ನು ಜನ ಗುಣುಗುಣಿಸುತ್ತಾರೆ.
ಇದಕ್ಕೆ ಕಾರಣವೆಂದರೆ, ಆ ಕಾಲದ ತುಳು ಭಾಷೆಯವರಲ್ಲದ ಖ್ಯಾತ ಕನ್ನಡ, ತಮಿಳು ಸಂಗೀತ ನಿರ್ದೇಶಕರು ಮತ್ತು ಗಾಯಕರು ತುಳು ಚಿತ್ರಗಳಿಗಾಗಿ ಕೆಲಸ ಮಾಡಿರುವುದು ಇದಕ್ಕೆ ಕಾರಣ. ಸ್ಥಳೀಯ ಕಲಾವಿದರ ಕೊಡುಗೆ ಕಡಿಮೆ ಎಂದು ಹೇಳುವುದು ಖಂಡಿತ ಇದರ ಉದ್ದೇಶವಲ್ಲ. ಆದರೆ, ಪರಭಾಷೆಯ ಕಲಾವಿದರು ಆಗ ಕಡೆಗಣಿಸಲಾಗಿದ್ದ ತುಳುವಿನಂತಹ ಒಂದು ಲಿಪಿ ಇಲ್ಲದಿದ್ದ ಪ್ರಾದೇಶಿಕ ಭಾಷೆಯ ಕುರಿತ ತೋರಿದ ಅಭಿಮಾನವನ್ನು ನೆನಪಿಸಿಕೊಳ್ಳಲೇಬೇಕು.
‘ಎನ್ನ ತಂಗಡಿ’ಯಲ್ಲಿ ಟಿ.ಎ. ಮೋತಿ ಅವರು ಸಂಗೀತ ನಿರ್ದೇಶನ ನೀಡಿ ಎರಡೂ ಹಾಡುಗಳನ್ನು ಹಾಡಿದ್ದರು. ತುಳು ಚಿತ್ರ ಸಂಗೀತದ ಸುವರ್ಣ ಯುಗ ತಕ್ಷಣವೇ ಆರಂಭವಾಗಿತ್ತು.
ಎರಡನೇ ಚಿತ್ರ ‘ದಾರೆದ ಬೊಡೆದಿ’ಯ ಸಂಗೀತ ತಂಡದಲ್ಲಿ ಘಟಾನುಘಟಿಗಳೇ ಇದ್ದರು. ನಿರ್ದೇಶಕರಾಗಿ ರಾಜನ್-ನಾಗೇಂದ್ರ, ಹಿನ್ನೆಲೆ ಗಾಯಕರಾಗಿ ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ, ಸರೋಜಿನಿ ಪಟ್ಟಾಭಿ ಮತ್ತು ನಾಗೇಂದ್ರ ಕೆಲಸ ಮಾಡಿದ್ದರು. ಆ ಚಿತ್ರದ ‘ಓ ಮಂಜುನಾಥ ಉಂದು ನ್ಯಾಯನಾ, ಎನ್ನ ಬದ್ಕ್ ಅಡ್ಡ ಈ ಬತ್ತನಾ..’ ಎಂಬ ಹಾಡು ಚಿರಸ್ಮರಣೀಯ.
ಅಂದಿನಿಂದ ಮುಂದಿನ ಕೆಲವು ವರ್ಷಗಳ ಕಾಲ ದೊಡ್ಡ ದೊಡ್ಡ ಹೆಸರುಗಳು ತುಳು ಚಿತ್ರಸಂಗೀತದಲ್ಲಿ ಕಾಣಿಸಿಕೊಳ್ಳುತ್ತದೆ. ರಾಜನ್-ನಾಗೇಂದ್ರ ಅವರು ನಂತರ ‘ಪಗೆತ ಪುಗೆ’ ಸೇರಿದಂತೆ ಹಲವು ತುಳು ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿದ್ದಾರೆ. ಆಗಿನ ವೈಭವಕ್ಕೆ ಉದಾಹರಣೆಯಾಗಿ ಈ ಚಿತ್ರದ ಸಂಗೀತ ತಂಡವನ್ನು ನೋಡಬಹುದು. ಹಿನ್ನೆಲೆಗಾಯಕರಾಗಿ ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ, ಎಚ್.ಎಂ. ಮಹೇಶ್ ಇದ್ದರೆಂದರೆ ಊಹಿಸಿಕೊಳ್ಳಿ. ಈ ಚಿತ್ರದ ‘ಪಗೆತ ಪುಗೆನಾ ವಿಧಿತ ಧಗೆನಾ’, ‘ಮೋಕೆದ ಸಿಂಗಾರಿ ಉಂತುದೆ ವೈಯಾರಿ’ ಹಾಡುಗಳು ಸದಾ ಹಸಿರು. ಇವುಗಳಲ್ಲಿ ಒಂದನ್ನು ಹಾಡಿದವರು ಪಿ.ಬಿ. ಆಗಿದ್ದರೆ, ಇನ್ನೊಂದನ್ನು ಹಾಡಿದವರು ಎಸ್.ಪಿ.
ನಂತರದ ‘ಬಿಸತ್ತಿ ಬಾಬು’ ಚಿತ್ರಕ್ಕೆ ಸಂಗೀತ ನೀಡಿದವರು ಉಪೇಂದ್ರ ಕುಮಾರ್. ಅವರು ಮುಂದೆ ಇನ್ನೂ ಕೆಲವು ತುಳು ಚಿತ್ರಗಳಿಗೆ ಸಂಗೀತ ನೀಡಿದರು. ಈ ಚಿತ್ರದಲ್ಲಿ ಗಾಯಕರಾಗಿ ಪಿ.ಬಿ., ಎಸ್.ಪಿ., ಜಾನಕಿ, ವಾಣಿಯವರ ‘ಪಗೆತ ಪುಗೆ ತಂಡವೇ ಇತ್ತು. ‘ಅನ್ಯಾಯನಾ ವಿಚಿತ್ರನಾ ಕಲ್ಜಿಗ ಕಾಲ ದಾನೆ..’ ಎಂಬ ಹಾಡನ್ನು ಯಾರು ಮರೆಯಲು ಸಾಧ್ಯ?
ತುಳು ಚಿತ್ರರಂಗದಲ್ಲಿ ಅನೇಕ ಖ್ಯಾತನಾಮರು ಸಂಗೀತ ನಿರ್ದೇಶನ ನೀಡಿದ್ದಾರೆ. ರಾಜನ್-ನಾಗೇಂದ್ರ, ಉಪೇಂದ್ರ ಕುಮಾರ್ ಅವರಲ್ಲದೆ, ವಿಜಯಭಾಸ್ಕರ್, ಪ್ರವೀಣ್ ಗೋಡ್ಕಿಂಡಿ, ಇಲ್ಲಿಯವರೇ ಆದ ವಿ. ಮನೋಹರ್, ಗುರುಕಿರಣ್ ಸೇರಿದ್ದಾರೆ. ಇವರಲ್ಲಿ ಉಪೇಂದ್ರ ಕುಮಾರ್ ಅವರೇ ಹೆಚ್ಚಿನ ತುಳು ಚಿತ್ರಗಳಿಗೆ ಸಂಗೀತ ನೀಡಿದವರು.
ಹಿನ್ನೆಲೆ ಗಾಯಕರಲ್ಲಿ ಈಗಾಗಲೇ ಹೆಸರಿಸಿದವರನ್ನು ಬಿಟ್ಟು, ಜೇಸುದಾಸ್, ಬಿ.ಕೆ. ಸುಮಿತ್ರಾ, ಎಲ್.ಆರ್.ಈಶ್ವರಿ, ಕಸ್ತೂರಿ ಶಂಕರ್ ಅನೇಕ ತುಳು ಹಾಡುಗಳನ್ನು ಹಾಡಿದ್ದಾರೆ. ಇವರಲ್ಲಿ ಅತ್ಯಂತ ಹೆಚ್ಚು ಹಾಡುಗಳನ್ನು ಹಾಡಿದವರೆಂದರೆ ಪಿ.ಬಿ. ಶ್ರೀನಿವಾಸ್.
ಪಿ.ಬಿ. ಶ್ರೀನಿವಾಸ್ ಅವರು ಎರಡನೇ ತುಳು ಚಿತ್ರ ‘ದಾರೆದ ಬುಡೆದಿ’ಯಿಂದ ಹಿಡಿದು ನಂತರ ‘ಪಗೆತ ಪುಗೆ’, ‘ಬಿಸತ್ತಿ ಬಾಬು’, ‘ಉಡಲ್ದ ತುಡರ್’, ‘ಕೋಟಿ ಚೆನ್ನಯ’, ‘ಯಾನ್ ಸನ್ಯಾಸಿ ಆಪೆ’, ‘ಕಾಸ್ದಾಯೆ ಕಂಡನೆ’, ‘ಯೇರ್ ಮಲ್ತಿನ ತಪ್ಪು’, ‘ಬಯ್ಯಮಲ್ಲಿಗೆ’, ‘ಸಾವಿರಡೊರ್ತಿ ಸಾವಿತ್ರಿ’ ವರೆಗೆ ಸತತ 10 ಚಿತ್ರಗಳಲ್ಲಿ ಹಾಡಿದ್ದು, ನಂತರ ಬಂದ ‘ಕೋಟಿ ಚೆನ್ನಯ’ ಬಿಟ್ಟು ನಂತರ ‘ಬೊಳ್ಳಿದೋಟ’, ‘ನ್ಯಾಯೊಗು ಜಿಂದಾಬಾದ್’ ಎಂಬ ಎರಡು ಚಿತ್ರಗಳು; ನಂತರ 3 ಚಿತ್ರಗಳನ್ನು ಬಿಟ್ಟು ‘ಭಾಗ್ಯವಂತೆದಿ’, ‘ಬದ್ಕೆರೆ ಬುಡ್ಲೆ’, ‘ದಾರೆದ ಸೀರೆ’ಎಂಬ3 ಚಿತ್ರಗಳಲ್ಲಿ ಹಾಡಿದ್ದಾರೆ. ಇದು ಬಹುಶಃ ಅವರ ಕೊನೆಯ ತುಳು ಚಿತ್ರ. ಅಂದರೆ, 1971ರಿಂದ 1984ರ ವರೆಗೆಬಿಡುಗಡೆಯಾದ 20 ತುಳು ಚಿತ್ರಗಳ ಪೈಕಿ ಪಿ.ಬಿ. ಶ್ರೀನಿವಾಸ್ ಅವರು 15 ಚಿತ್ರಗಳಲ್ಲಿ ಹಾಡಿದ್ದಾರೆಂದರೆ ಅದು ತುಳುಚಿತ್ರರಂಗಕ್ಕೆ ಸಲ್ಲಿಸಿದ ಅಪೂರ್ವ ಕೊಡುಗೆಯಲ್ಲದೆ ಇನ್ನೇನು?ನಂತರದ ದಿನಗಳಲ್ಲಿ ಕೆ.ಎಸ್.ಚಿತ್ರ, ಬಿ. ಆರ್. ಛಾಯಾ, ಮಂಜುಳಾ ಗುರುರಾಜ್, ಹಿಂದಿಯ ಉದಿತ್ ನಾರಾಯಣ್, ಸೋನುನಿಗಮ್, ಹರಿಹರನ್, ಶಂಕರ್ ಮಹದೇವನ್, ಸಿದ್ದಾಥ ಮಹದೇವನ್, ಅಜೇಯ್ ವಾರಿಯರ್, ಹಂಸಿಕಾ ಅಯ್ಯರ್, ರಾಜೇಶ್ ಕೃಷ್ಣನ್ ಮುಂತಾದವರು ಕೂಡಾ ಹಾಡಿದ್ದಾರೆ.
ಎಸ್.ಪಿ. ಬಾಲಸುಬ್ರಹ್ಮಣ್ಯಂ ಔದಾರ್ಯ
ಆದರೆ, ತುಳು ಚಿತ್ರರಂಗದ ಆರಂಭದ ದಶಕಗಳಲ್ಲಿ ಪರಭಾಷಾ ಸಂಗೀತಕಾರರು ಮತ್ತು ಗಾಯಕರು ತೋರಿದ ಪ್ರೀತಿ ಅಭಿಮಾನಗಳು ಕೃತಜ್ಞತೆಗೆ ಅರ್ಹವಾಗಿವೆ. ಒಂದು ಉದಾಹರಣೆಯನ್ನು ಇಲ್ಲಿ ನೀಡಬಹುದು. ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಕನ್ನಡ, ತಮಿಳು, ಮಲಯಾಳಂ, ತೆಲುಗು ಸೇರಿದಂತೆ ಹಲವು ಪ್ರಮುಖ ಭಾಷೆಗಳಲ್ಲಿ ಅತ್ಯಂತ ಬೇಡಿಕೆಯ ಕಾಲವದು. ತುಳು ಚಿತ್ರ ನಿರ್ಮಾಪಕರು ಅವರಿಂದ ಹಾಡಿಸಬೇಕೆಂದು ಮದ್ರಾಸಿಗೆ ಹೋದರು. ಎಡೆಬಿಡದ ರೆಕಾರ್ಡನಲ್ಲಿ ತೊಡಗಿದ್ದರೂ ದೂರದಿಂದ ತುಳು ಭಾಷೆಯವರು ಬಂದಿದ್ದಾರೆಂದು ಎಸ್.ಪಿ.ಯವರು ಅವರನ್ನು ಭೇಟಿ ಮಾಡಿ ಹಾಡಿನ ವಿವರ, ಸಂದರ್ಭ, ಸರಿಯಾದ ಉಚ್ಛಾರಣೆ ಎಲ್ಲವನ್ನೂ ತಾಳ್ಮೆಯಿಂದ ಕೇಳಿ ತಿಳಿದುಕೊಂಡರಂತೆ. ಅಂತೆಯೇ ರಿಹರ್ಸಲ್ ಮಾಡಿ ಹಾಡಿನ ರೆಕಾರ್ಡಗ್ ಮಾಡಿಕೊಟ್ಟರಂತೆ. ನಿರ್ಮಾಪಕರು ಸಂಭಾವನೆ ಕೊಡಲು ಹೋದಾಗ ಗೌರವಧನ ಎಂದು ಕೇವಲ ಐನೂರು ರೂ. ಮಾತ್ರ ಪಡೆದುಕೊಂಡರಂತೆ. ಇದು ಅವರ ಹೃದಯ ವೈಶಾಲ್ಯಕ್ಕೆ, ಎಲ್ಲಾ ಭಾಷೆಗಳ ಮೇಲಿನ ಪ್ರೇಮಕ್ಕೆ ಉದಾಹರಣೆ.
Leave a Reply
Be the First to Comment!