ಎನ್ನ ತಂಗಡಿ – 1971
ನಿರ್ಮಾಣ : ಡಾಲಿ ಫಿಲಂಸ್
ನಿರ್ಮಾಪಕರು : ಎಸ್.ಆರ್.ರಾಜನ್
ಸಂಗೀತ ನಿರ್ದೇಶನ: ಟಿ.ಎ.ಮೋತಿ.
ನಿರ್ದೇಶನ : ಎಸ್.ಆರ್.ರಾಜನ್
ತಾರಾಗಣ : ಆನಂದ ಶೇಖರ್ ,ಸೋಮಶೇಖರ್ ಪುತ್ರನ್ ,ಲೋಕಯ್ಯ ಶೆಟ್ಟಿ, ಪಂಡರಿಬಾಯಿ .
ತಾಂತ್ರಿಕವಾಗಿ ಮೊದಲ ತುಳು ಚಲನಚಿತ್ರ ಎಂಬ ಹೆಗ್ಗಳಿಕೆ ‘ಎನ್ನ ತಂಗಡಿ’ ಚಿತ್ರದ್ದು. ಯಾಕೆಂದರೆ, ಎರಡನೇ ಚಿತ್ರ ಎನಿಸಿದ ದಾರೆದ ಬೊಡೆದಿ’ ಚಿತ್ರದ ಯೋಜನೆಯನ್ನು ಕೆ.ಎನ್. ಟೇಲರ್ ಅವರು 1969ರಲ್ಲಿಯೇ ರೂಪಿಸಿದ್ದರೂ, ಅದು ಎರಡನೇ ಚಿತ್ರವಾಗಿ ಬಿಡುಗಡೆಯಾಯಿತು. ಆದರೆ, ಈ ಚಿತ್ರದ ಚಿತ್ರೀಕರಣ ಮೊದಲೇ ಮುಗಿದಿತ್ತು.
ಡಾಲಿ ಫಿಲಂಸ್ ಲಾಂಛನದಲ್ಲಿ ಬೆಂಗಳೂರಿನ ತಂತ್ರಜ್ಞ ಎಸ್.ಆರ್. ರಾಜನ್ ಅವರು ನಿರ್ಮಿಸಿ
ನಿರ್ದೇಶಿಸಿದ ಈ ಚಿತ್ರಕ್ಕೆ ಆನಂದ ಶೇಖರ್, ಸೋಮಶೇಖರ್, ಸುಂದರ ಕರ್ಕೇರ ಅವರು ನೆರವಾಗಿದ್ದಾರೆ. ಕೆ.ಬಿ.ಭಂಡಾರಿ ಮತ್ತು ಎಸ್.ಆರ್.ರಾಜನ್ ಅವರು ಮೂಲ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ. ಕೆ.ಬಿ. ಭಂಡಾರಿ ಅವರು ಸಂಭಾಷಣೆ ಬರೆದಿದ್ದಾರೆ. ಈ ಚಿತ್ರದಲ್ಲಿ ಎರಡು ಹಾಡುಗಳಿದ್ದು, ಅವುಗಳನ್ನು ಬನ್ನಂಜೆ ಗೋವಿಂದಾಚಾರ್ಯ ಮತ್ತು ಭೋಜ ಸುವರ್ಣ ಅವರು ಬರೆದಿದ್ದು, ಟಿ.ಎ.ಮೋತಿ ಅವರು ಸಂಗೀತ ನೀಡಿದ್ದಾರೆ. ವರದನ್ ಎಂಬವರು ಛಾಯಾಗ್ರಹಣ ಮಾಡಿದ್ದರು.
ನಟವರ್ಗದಲ್ಲಿ ಆನಂದ ಶೇಖರ್, ಸೋಮಶೇಖರ ಪುತ್ರನ್, ಮಂಗಳೂರು ದಿಲೀಪ್, ಎಸ್.ಆರ್.ರಾಜನ್, ಲೋಕಯ್ಯ ಶೆಟ್ಟಿ, ದೇವಸ್ಯ ರಾಮಣ್ಣ ಶೆಟ್ಟಿ, ಫಂಡರಿಬಾಯಿ, ಕವಿತಾ ಮುಂತಾದವರು ಇದ್ದರು.
ಚಿತ್ರವನ್ನು ಟಿ.ಎ. ಶ್ರೀನಿವಾಸ್ ಅವರು ಚಿತ್ರಭಾರತಿ ಹಂಚಿಕೆಯ ಮೂಲಕ ಬಿಡುಗಡೆ ಮಾಡಿದ್ದರು. 1971ರ ಫೆಬ್ರವರಿ 19ರಂದು ಮಂಗಳೂರಿನ ಜ್ಯೋತಿ ಚಿತ್ರ ಮಂದಿರದಲ್ಲಿ ತೆರೆಕಂಡು, ಎರಡು ವಾರಗಳ ಕಾಲ ಓಡಿತ್ತು. 50,000 ರೂ. ವೆಚ್ಚದಲ್ಲಿ ತಯಾರಾದ ಈ ಚಿತ್ರಕ್ಕೆ ಕರ್ನಾಟಕ ಸರಕಾರದಿಂದ ಅಷ್ಟೇ ಮೊತ್ತದ ಧನಸಹಾಯ ಸಿಕ್ಕಿತ್ತು.
ತಂದೆ-ತಾಯಿಯನ್ನು ಕಳೆದುಕೊಂಡ ಅಣ್ಣ, ತಮ್ಮ ಮತ್ತು ತಂಗಿಯ ಕಥೆಯಿದು. ಈ ಕೃಷಿಕ ಕುಟುಂಬದಲ್ಲಿ ಅಣ್ಣ ಜವಾಬ್ದಾರಿಯಿಂದ ಮನೆ ನೋಡಿಕೊಂಡರೆ, ತಮ್ಮ ಬೇಜವಾಬ್ದಾರಿಯಿಂದ ವರ್ತಿಸುತ್ತಿರುತ್ತಾನೆ. ಇದರಿಂದಾಗಿ ಅಣ್ಣ-ತಮ್ಮಂದಿರಲ್ಲಿ ಜಗಳವಾಗುತ್ತಿರುತ್ತದೆ. ತಂಗಿಯನ್ನು ಪ್ರೀತಿಸುವ ನೆರೆಮನೆಯ ಯುವಕ ರಾಜಿ ಮಾಡುತ್ತಾ ಇರುತ್ತಾನೆ. ಅಣ್ಣ ಅಪಘಾತದಲ್ಲಿ ಕಾಲು ಕಳೆದುಕೊಳ್ಳುತ್ತಾನೆ. ನೆರಮನೆಯ ಯುವಕ ಅವರ ತಂಗಿಯನ್ನು ಮದುವೆಯಾಗುತ್ತಾನೆ. ಈ ಜೋಡಿಯ ಸಹಕಾರದಿಂದ ಮತ್ತೆ ಸರಿದಾರಿಗೆ ಬರುತ್ತದೆ.
ಈ ಚಿತ್ರ ಕಳಪೆ ಗುಣಮಟ್ಟದ ಕಾರಣದಿಂದ ಜನಪ್ರಿಯತೆ ಗಳಿಸಲಿಲ್ಲ.